“ಜಾತ್ಯಾತೀತತೆಯನ್ನು ಕಳೆದುಕೊಂಡ ಜೆ.ಡಿ.ಎಸ್ : ಶಾಕೀರ್ ಹುಸೇನ್.”
1 min read
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ದ್ವಂದ್ವ ನಿಲುವಿನಿಂದಾಗಿ ತಾನು ಸೇರಿದಂತೆ ಅಲ್ಪ ಸಂಖ್ಯಾತ ಘಟಕದಲ್ಲಿ ಹುದ್ದೆ ಪಡೆದ ಬಹುತೇಕ ಎಲ್ಲಾ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಾಕೀರ್ ಹುಸೇನ್ ಹೇಳಿದರು.
ಅವರು ಸೋಮವಾರ ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪಕ್ಷದ ಯಾವ ಹಿರಿಯರೊಂದಿಗೆ ಚರ್ಚಿಸದೇ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ನಮ್ಮ ಸಮುದಾಯದ ಜನರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೇ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದು, ಈಗ ಸಾಮಾನ್ಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಅಕ್ಟೋಬರ್ 16ರಂದು ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಸಿ.ಕೆ.ಇಬ್ರಾಹಿಂ ಅವರು ಅಲ್ಪಸಂಖ್ಯಾತ ಘಟಕ ಸೇರಿದಂತೆ ಎಲ್ಲಾ ಮುಖಂಡರ ಸಭೆ ಕರೆದಿದ್ದು, ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಜೆ.ಡಿ.ಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಾಜೀದ್ ಹುಸೇನ್ ಮಾತನಾಡಿ, ಜೆ.ಡಿ.ಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರ ಘಟಕದ ಮತದಿಂದ ಅನೇಕ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಜತೆಗೆ ಅನೇಕ ಕ್ಷೇತ್ರದಲ್ಲಿ ಅಲ್ಪ ಮತದಿಂದ ಸೋಲು ಅನುಭವಿಸಿರುವುದು ರಾಜ್ಯದ ನಾಯಕರಿಗೆ ತಿಳಿದಿದೆ. ಜಾತ್ಯಾತೀತ ನಿಲುವು ಹೊಂದಿದ್ದ ಜೆ.ಡಿ.ಎಸ್ ಈಗ ದಿಢೀರನೇ ಜಾತ್ಯಾತೀತ ನಿಲುವು ಮರೆತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನೋವು ತಂದಿದೆ. ಹಾಗಾಗಿ ನಮಗೆ ನೀಡಿದ ಜವಾಬ್ದಾರಿ ಹುದ್ದೆಗೆ ರಾಜೀನಾಮೆ ನೀಡಿದ್ದೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಅಲ್ಪ ಸಂಖ್ಯಾತ ಘಟಕದ ತಾಲ್ಲೂಕು ಅಧ್ಯಕ್ಷ ನಾಸೀರ್,ಯುವ ಘಟಕದ ಅಧ್ಯಕ್ಷ ಆಸಿಫ್,ಮುಖಂಡರಾದ ಇಬ್ರಾಹಿಂ ಬಿಳಗುಳ,ಶಿರಾಜ್,ಮುನ್ನ ಬಿದರಹಳ್ಳಿ,ಜಾಕೀರ್ ಹುಸೇನ್ ಉಪಸ್ಥಿತರಿದ್ದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.