“ನಾಲ್ಕು ದಶಕಗಳ ಅಂಚೆ ಸೇವೆಗೆ ಕಾರಂತ ಸಹೋದರರ ನಿವೃತ್ತಿಯ ವಿದಾಯ.”
1 min read
ಮಲೆನಾಡಿನಲ್ಲಿ ನಾಲ್ಕು ದಶಕಗಳ ಕಾಲ ಗ್ರಾಮೀಣ ಭಾಗದ ಅಂಚೆ ಕಚೇರಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಜನರ ಅಭಿಮಾನ ಸಂಪಾದಿಸಿದ ತರುವೆ ಗ್ರಾಮದ ಕಾರಂತ ಸಹೋದರರು ಈ ವರ್ಷ ಅಂಚೆ ಸೇವೆಗೆ ನಿವೃತ್ತಿಯ ಮೂಲಕ ವಿದಾಯ ಹೇಳಿದ್ದಾರೆ.

ಅವರೇ ಪಿ.ಕೆ.ಸುಬ್ರಾಯ ಕಾರಂತ ಹಾಗೂ ಪಿ.ಕೆ.ದಿವಾಕರ ಕಾರಂತ ಸಹೋದರರು. ಉತ್ತಮ ಕೃಷಿಕರು, ಅವಿಭಕ್ತ ಕುಟುಂಬವಾಗಿ ತರುವೆ ಗ್ರಾಮದಲ್ಲಿ ನೆಲೆಸಿರುವ ಕಾರಂತ ಸಹೋದರರು ಕೊಟ್ಟಿಗೆಹಾರದ ಅಂಚೆ ಕಚೇರಿಯಲ್ಲಿ ಪಾಲಕ, ಸೇವಕರಾಗಿ ಸೇವೆ ನೀಡಿದರು.ಇವರು ಪ್ರಜಾವಾಣಿ ಪತ್ರಿಕೆಯ ಪತ್ರಿಕಾ ವಿತರಕರಾಗಿ ಪ್ರಸ್ತುತ ಸೇವೆ ನೀಡುತ್ತಾ ಇದ್ದಾರೆ.ಕೊಟ್ಟಿಗೆಹಾರ ಅತೀ ಹೆಚ್ಚು ಮಳೆ ಬೀಳುವ ಮಲೆನಾಡಿನ ಚಿರಾಪುಂಜಿ. ಐದು ದಶಕಗಳ ಹಿಂದೆ ಅಂಚೆ ಕಚೇರಿಯನ್ನೇ ಜನರು ಅವಲಂಬಿಸಿ ನಡೆಯುವ ಜೀವನವಾಗಿತ್ತು. ಟೆಲಿಗ್ರಾಮ್,ಪತ್ರಗಳು ಹಾಗೂ ಗ್ರೀಟಿಂಗ್ಸ್, ಮನಿಯಾರ್ಡರ್, ಮದುವೆ ಪತ್ರಗಳ ಆಗಮನಕ್ಕೆ ಅಂಚೆ ಕಚೇರಿಯೇ ಮುಖ್ಯವಾಗಿತ್ತು. ಅಂದು ದಿನಕ್ಕೆ ಐನೂರಕ್ಕೂ ಅಧಿಕ ಪತ್ರ ದಾಖಲೆಗಳು ಅಂಚೆ ಮೂಲಕ ಬರುತ್ತಿದ್ದವು.ಅಂತಹ ಸಮಯದಲ್ಲಿ ಒಂದೆಡೆ ಧಾರಾಕಾರ ಸುರಿಯುತ್ತಿರುವ ಗಾಳಿ ಮಳೆ, ಒಂದೆಡೆ ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ವ್ಯವಸ್ಥೆಯೂ ವಿರಳ.ಅಂಚೆ ಕಚೇರಿಗಳಲ್ಲಿ ಕೆಲಸ ಮಾಡುವುದೇ ಸವಾಲು.ಪತ್ರಗಳು,ಟೆಲಿಗ್ರಾಂ,ಮನಿಯಾರ್ಡರ್, ಗ್ರೀಟಿಂಗ್ಸ್ ಹಾಗೂ ಮದುವೆ ಪತ್ರಗಳು ಮನೆಮನೆಗೆ ತಲುಪಿಸಬೇಕಾದರೆ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ಬೀರೂರಿನಿಂದ ಟಪ್ಪಾಲು ಬ್ಯಾಗುಗಳು ಕೊಟ್ಟಿಗೆಹಾರ ಕೇಂದ್ರ ಸ್ಥಾನದ ಅಂಚೆ ಕಚೇರಿಯಾಗಿದ್ದರಿಂದ ಆ ಸಮಯದಲ್ಲಿ ಬ್ಯಾಗುಗಳು ಇಲ್ಲಿಯೇ ಬಂದು ಬೀಳುತ್ತಿದ್ದವು.ಅವುಗಳನ್ನು ಮಳೆಯಲ್ಲಿಯೇ ಸಾಗಿಸಿ ಖಾಸಗಿ ಬಸ್ ಗಳಿಗೆ ಹಾಕಬೇಕಿತ್ತು.ಇಂದಿನಂತೆ ಸೌಲಭ್ಯ ಗಳಿರಲಿಲ್ಲ.ಬಾಳೂರು,ಕೆಳಗೂರು,ಜಾವಳಿ,ನಿಡುವಾಳೆ,ಕೂವೆ,ಗಬ್ಗಲ್, ಮಾಗುಂಡಿ, ಹಿರೇಬೈಲ್ ಹಾಗೂ ಕಳಸವರೆಗಿನ ಟಪಾಲನ್ನು ತಲುಪಿಸುವ ಕಾಯಕವನ್ನು ಕೊಟ್ಟಿಗೆಹಾರ ಅಂಚೆ ಕಚೇರಿಯ ಪಾಲಕ,ಸೇವಕರೇ ಮಾಡಬೇಕಾಗಿತ್ತು.ಅಂತಹ ಕಠಿಣ ಸಮಯದಲ್ಲೂ ಕಾರಂತ ಸಹೋದರರು ಉತ್ತಮ ಸೇವೆ ನೀಡಿ ಜನಮಾನ್ಯತೆಯನ್ನು ಪಡೆದರು.ಕಾರಂತ ಸಹೋದರರ ದಿನಚರಿ ಬೆಳಿಗ್ಗೆ 5.30 ವರೆಗೆ ಎದ್ದು ನಿತ್ಯದ ಕಾಯಕವನ್ನು ಮುಗಿಸಿ ಬೆಳಿಗ್ಗೆ ತರುವೆ ಗ್ರಾಮದಿಂದ ಒಂದು ಕಿ.ಮೀ ಅಂತರದ ಕೊಟ್ಟಿಗೆಹಾರಕ್ಕೆ ಬಂದು ಪತ್ರಿಕೆ ವಿತರಿಸುತ್ತಿದ್ದರು.ನಂತರ ಮಳೆ ಅಳೆಯುವ ಕಾಯಕವನ್ನು ನೆರವೇರಿಸುತ್ತಿದ್ದರು.ಕೆಲವು ವರ್ಷ ಖಾಸಗಿ ಬಸ್ ಏಜೆಂಟರ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಅದರ ನಂತರ ಕಚೇರಿಯ ಕಾಯಕದಲ್ಲಿ ಮಗ್ನರಾಗುತ್ತಿದ್ದರು. ಇವರುಗಳ ಬಹುಮುಖಿ ಸೇವೆ ಊರಿನ ಜನರಲ್ಲಿ ಪ್ರೀತಿ, ನಂಬಿಕೆ ಸಂಪಾದಿಸಲು ಸಾಧ್ಯವಾಗಿತ್ತು.ಕಚೇರಿಗಳಲ್ಲಿ ಇವರ ಲೆಕ್ಕಾಚಾರಗಳು ಯಾವ ಅಧಿಕಾರಿ ಕಚೇರಿಗೆ ಭೇಟಿ ನೀಡಿದ್ದರೂ ಅವರ ಕರ್ತವ್ಯ ನಿಷ್ಟೆ ಅಧಿಕಾರಿಗಳಿಗೆ ಎದ್ದು ತೋರುತ್ತಿತ್ತು.ಕೆಲಸದಲ್ಲಿ ಯಾವುದೇ ಕಪ್ಪು ಚುಕ್ಕೆ ಅಂಟಿಸಿಕೊಂಡವರಲ್ಲ.ನಾನೊಬ್ಬ ಅಂಚೆ ಪಾಲಕ, ಸೇವಕ ಎಂಬ ಅಹಂ ಕೂಡ ಇವರಲ್ಲಿ ಇರಲಿಲ್ಲ.ಸದಾ ನಗು ಮುಖದ ವ್ಯಕ್ತಿತ್ವ ಇಬ್ಬರಲ್ಲೂ ಮನೆ ಮಾಡಿತ್ತು.ಇವರ ಕೃಷಿ ಗದ್ದೆಗಳನ್ನು ಇವರೇ ಉತ್ತು ಕೃಷಿ ಮಾಡುತ್ತಿದ್ದರು.ಒಂದೇ ಅಂಚೆ ಕಚೇರಿಯಲ್ಲಿ ಪಿ.ಕೆ.ಸುಬ್ರಾಯ ಕಾರಂತ ಪೋಸ್ಟ್ ಮಾಸ್ಟರ್ ಆಗಿಯೂ ಸಹೋದರ ಪಿ.ಕೆ.ದಿವಾಕರ್ ಕಾರಂತ್ ಪೋಸ್ಟ್ ಮ್ಯಾನ್ ಆಗಿಯೂ ನಿರಂತರ ಅಂಚೆ ಕಚೇರಿಯಲ್ಲಿ ಎಲೆಮರೆಯ ಸೇವೆಯಂತೆ ನಾಲ್ಕು ದಶಕಗಳ ಕಾಲ ಸೇವೆ ನೀಡಿದರು. ಅಂಚೆ ಪಾಲಕರಾಗಿದ್ದ ಸುಬ್ರಾಯ ಕಾರಂತ ಅವರು 2021 ರಲ್ಲಿ ಅಂಚೆ ಇಲಾಖೆಯಲ್ಲಿ ನಿವೃತ್ತಿ ಹೊಂದಿದರು.ಆದರೆ ಕೊರೊನಾ ಸಮಯವಾದ್ದರಿಂದ ಇವರನ್ನು ಗೌರವಿಸುವುದಾಗಲಿ ಬೀಳ್ಕೊಡುಗೆ ಕೂಡ ಮಾಡಲು ಸಾಧ್ಯವಾಗದೇ ನಿವೃತ್ತಿ ಪಡೆದು ಮನೆಯಲ್ಲಿ ಸುಮ್ಮನಾಗಬೇಕಾಯಿತು.ದಶಕಗಳ ಸೇವೆ ನೀಡಿದ ಜನಮಾನ್ಯನಿಗೆ ನಂತರವಾದರೂ ಅಂಚೆ ಅಧಿಕಾರಿಗಳು ಗೌರವಿಸಲು ಮುಂದಾಗಲಿಲ್ಲ.ಈಗ ಅಂಚೆ ಸೇವಕ ದಿವಾಕರ್ ಅವರ ನಿವೃತ್ತಿಯಾಗಿದೆ.ಅವರಿಗೆ ಇಲಾಖೆಯ ಕ್ರಮದಂತೆ ಅಂಚೆ ಸಿಬ್ಬಂದಿಗಳು ಬೀಳ್ಕೊಡುಗೆ ನೀಡಿದ್ದಾರೆ.ಇಂತಹ ಜನಮಾನ್ಯರಿಗೆ ಗೌರವಗಳು ಸಿಗಬೇಕು.ಅಂಚೆ ಇಲಾಖೆ ಸೇವೆಯನ್ನು ಗಣನೆಗೆ ಪಡೆದು ಗೌರವದಿಂದ ಬೀಳ್ಕೊಡುವಂತಾಗಬೇಕು.ಜನರ ಅಭಿಮಾನ ಹೊಂದಿರುವ ಕಾರಂತ ಸಹೋದರರಿಗೆ ನಿವೃತ್ತಿ ಜೀವನಕ್ಕೆ ಅಕ್ಷರ ನಮನಗಳೇ ಸಾಕ್ಷಿಯಾಗಿವೆ.
‘ ನಮಗೆ ನಮ್ಮ ಕೆಲಸದಲ್ಲಿ ಪ್ರಾಮಾಣಿಕತೆಯ ಕೆಲಸ ಮಾಡಿದ್ದೇವೆ ಎಂಬ ಜನರ ಆಶಯಗಳೇ ಸಾಕು.ಇದೇ ನಮಗೆ ನಮ್ಮ ಸೇವೆಗೆ ಉಡುಗೊರೆಯಾಗಿದೆ‘ ಎಂದು ನಿವೃತ್ತ ಅಂಚೆ ಪಾಲಕರಾದ ಪಿ.ಕೆ.ಸುಬ್ರಾಯ ಕಾರಂತ ಅವರು ವಾಹಿನಿಗೆ ತಿಳಿಸಿದರು.
ತರುವೆ ಅರ್ಚಕ ಕಾರಂತ ಸಹೋದರರು ಶ್ರಮ ಜೀವಿಗಳು, ಮಾತ್ರವಲ್ಲ,ಪ್ರಾಮಾಣಿಕತೆಯ ಸೇವೆಯನ್ನು ಜನರು ಇಂದೂ ನೆನೆಸುತ್ತಾರೆ.ಕಾರಂತ ಅವರಿಬ್ಬರಿಗೆ ನಿವೃತ್ತಿಯಾಗಿದೆ ಎಂದು ಅನಿಸುವುದೇ ಇಲ್ಲ’ ಎಂದು ಸ್ಥಳೀಯರಾದ ಟಿ.ಎಂ.ನರೇಂದ್ರಗೌಡ ಹೇಳಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.