लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪರಿಸರ ಮತ್ತು ಸಾಮಾಜಿಕ ಕಳಕಳಿ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ತೇಜಸ್ವಿ ಅವರು ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ತಮ್ಮಲ್ಲಿ ಮೈಗೂಡಿಸಿಕೊಂಡಿದ್ದರು ಮತ್ತು ತಮ್ಮ ಸಾಹಿತ್ಯದಲ್ಲಿ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದ್ದಾರೆ ಎಂದು ಪೂರ್ಣಚಂದ್ರ ತೇಜಸ್ವಿ ಒಡನಾಡಿಯಾಗಿದ್ದ ಪ್ರದೀಪ್ ಕೆಂಜಿಗೆ ಹೇಳಿದರು.

ಮೂಡಿಗೆರೆ ತಾಲ್ಲೂಕಿನ ಬಣಕಲ್ ಪ್ರೌಢಶಾಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ ಟ್ರಸ್ಟ್ ಕಡೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಾಹಿತ್ಯ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಒಂದು ದೇಶದ ಮೌಲ್ಯಗಳ ಪರಿಕಲ್ಪನೆಯನ್ನು ವೈಜ್ಞಾನಿಕವಾಗಿ ಹೇಗೆ ಸಾಧಿಸಬಹುದು ಎಂಬುದನ್ನು ತೇಜಸ್ವಿ ಕಥೆಗಳಲ್ಲಿ ಉತ್ತೇಜನ ನೀಡಿದ್ದಾರೆ ಅವರು ಕಾಡುಗಳಲ್ಲಿ ವಿಶೇಷವಾದ ಪ್ರಾಣಿ ಮತ್ತು ಪಕ್ಷಿಗಳ ಅನ್ವೇಷಣೆ ಮಾಡುವ ಮೂಲಕ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದ್ದಾರೆ ಎಂದರು.

ಮೂಡಿಗೆರೆ ತಾಲ್ಲೂಕು ಕಸಾಪ ಅಧ್ಯಕ್ಷ ಹೆಚ್.ಎಂ. ಶಾಂತಕುಮಾರ್ ಮಾತನಾಡಿ, ಪರಿಸರದ ಕಥೆಗಳಲ್ಲಿ, ಚಿದಂಬರ ರಹಸ್ಯ, ಅಬಚೂರಿನ ಪೋಸ್ಟಾಫೀಸು ಮುಂತಾದ ಕೃತಿಗಳಲ್ಲಿ ಸಾಮಾಜಿಕ ಪರಿಕಲ್ಪನೆಯನ್ನು ಕಾಣಬಹುದು ಹಾಗೂ ಪರಿಸರದ ಕಾಳಜಿಯನ್ನು ಇರಿಸಿಕೊಂಡು ಹಲವು ಕೃತಿಗಳನ್ನು ಪೂಚಂತೇ ರಚಿಸಿದ್ದಾರೆ ಎಂದರು.

“ತೇಜಸ್ವಿ ಕೃತಿಯಲ್ಲಿ ಸ್ತ್ರೀ ಪಾತ್ರಗಳು” ವಿಷಯವನ್ನು ಕುರಿತು ಮೂಡಿಗೆರೆಯ ವಿಶಾಲ ನಾಗರಾಜ್ ಮಾತನಾಡಿ ಕಿರುಗೂರಿನ ಗಯ್ಯಾಳಿಗಳು ಕಥೆಯಲ್ಲಿ ಹಲವು ವಿಶೇಷವಾದ ಸ್ತ್ರೀ ಪಾತ್ರಗಳನ್ನು ಕಾಣುತ್ತೇವೆ. ತೇಜಸ್ವಿಯವರ ಕೃತಿಯಲ್ಲಿ ಗ್ರಾಮೀಣ ಪ್ರದೇಶದ ಕೃಷಿ ಸಂಸ್ಕøತಿಯಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಸೃಷ್ಠಿಸುತ್ತಿದ್ದರು. ಇಡೀ ಗ್ರಾಮೀಣ ಸೊಗಡಿನ ಹಬ್ಬ, ಹರಿದಿನಗಳು ಅವುಗಳ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುತ್ತಿದ್ದರು ಎಂದು ತಿಳಿಸಿದರು.

ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಅಧ್ಯಕ್ಷ  ಸೂರಿ ಶ್ರೀನಿವಾಸ್ ಮಾತನಾಡಿ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಜಿಲ್ಲೆಯಲ್ಲಿ ಇಂತಹ ವಿನೂತನವಾದಂತಹ ಸಾಹಿತ್ಯ ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಹಿತಿಗಳನ್ನು ಹಾಗೂ ಅವರ ಕೃತಿಗಳನ್ನು ಪರಿಚಯಿಸಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಸಾಹಿತ್ಯ ವೇದಿಕೆ ಮೂಲಕ ಪರಿಚಯಿಸಲಾಗುವುದು ಎಂದರು.

ಪೂಚಂತೇ ಕವಿ ಪರಿಚಯವನ್ನು ಗಾಯಕ ಬಕ್ಕಿ ಮಂಜುನಾಥ್ ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಣಕಲ್ ಪ್ರೌಢಶಾಲೆಯ ವಾಸುದೇವ ಭಟ್ ವಹಿಸಿದ್ದರು.

ಬಣಕಲ್ ಹೋಬಳಿ ಕಸಾಪ ಅಧ್ಯಕ್ಷರಾದ ಆದರ್ಶ, ಜಿಲ್ಲಾ ಕಸಾಪ ಮಹಿಳಾ ಘಟಕದ ಜಿಲ್ಲಾ ಸಂಚಾಲಕರಾದ ಕಲಾವತಿ ರಾಜಣ್ಣ, ಮೂಡಿಗೆರೆ ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷರಾದ ಅನಿತಾ ಜಗದೀಪ್, ಕಸಾಪ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಲೋಕೇಶ್, ಬಣಕಲ್ ಹೋಬಳಿ ಕಾರ್ಯದರ್ಶಿ ವಸಂತ್, ಶಿಕ್ಷಕರಾದ ಶ್ರೀನಿವಾಸ್, ಕವಿತಾ, ಸವಿತಾ, ಅಕ್ರಂ ಪಾಷ,ಕಾಫಿ ಬೆಳೆಗಾರರಾದ ರವಿಶಂಕರ್ ಕನ್ನಗೆರೆ ಮುಂತಾದವರು ಉಪಸ್ಥಿತರಿದ್ದರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *