ಗ್ರಂಥಾಲಯದಲ್ಲಿ ಬೇಸಿಗೆ ಬೆಸುಗೆ ಮಕ್ಕಳ ಶಿಬಿರಕ್ಕೆ ಚಾಲನೆ…..
1 min read
ಗ್ರಂಥಾಲಯದಲ್ಲಿ
ಬೇಸಿಗೆ ಬೆಸುಗೆ
ಮಕ್ಕಳ ಶಿಬಿರಕ್ಕೆ ಚಾಲನೆ
ಆಲ್ದೂರು: ಪಟ್ಟಣದ ಗ್ರಂಥಾಲಯದಲ್ಲಿ ಕರ್ನಾಟಕ ಸರ್ಕಾರ ವತಿಯಿಂದ ಅರಿವು ಕೇಂದ್ರಗಳಾದ ಗ್ರಂಥಾಲಯಗಳಲ್ಲಿ ಮಕ್ಕಳಿಗಾಗಿ ಜ್ಞಾನ ಮತ್ತು ಕ್ರಿಯಾಶೀಲತೆಯ ಸಂಭ್ರಮ ಧ್ಯೇಯ ವಾಕ್ಯದೊಂದಿಗೆ ಬೇಸಿಗೆ ಬೆಸುಗೆ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಿರುವ ಮಕ್ಕಳ ಶಿಬಿರವನ್ನು ಆಡಳಿತ ಅಧಿಕಾರಿ ರುದ್ರಪ್ಪ ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಕ್ಕಳೊಂದಿಗೆ ಮಾತನಾಡಿದ ಅವರು ಈ ಶಿಬಿರವು ಏಪ್ರಿಲ್ 10 ರಿಂದ ಮೇ 29ರವರೆಗೆ ನಡೆಯಲಿದ್ದು, ಶಿಬಿರದಲ್ಲಿ ಪ್ರತಿಯೊಂದು ವಿಷಯ ಹಾಗೂ ವಿಶೇಷ ಆಟಗಳು ಇದ್ದು ಎಲ್ಲದಕ್ಕೂ ಒಬ್ಬೊಬ್ಬ ಪರಿಣಿತಿ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ.
ಪ್ರಾದೇಶಿಕವಾಗಿ ಇರುವಂತಹ ಇಲಾಖೆಗಳ ಮಾಹಿತಿ ಆಡಳಿತ ಕಾನೂನುಗಳ ಅರಿವು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆ ಮತ್ತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದ್ದು ಅದರ ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರತಿ ಎರಡು ದಿನಗಳಿಗೊಮ್ಮೆ ಶಿಬಿರಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಶೂನ್ ನಹರ್, ಗುಣಮಟ್ಟದ ಕಲಿಕೆಯನ್ನು ಖಾಸಗಿ ಶಾಲೆಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಪಡೆಯುತ್ತಾರೆ ಎಂಬ ಮಾತಿದೆ ಪ್ರತಿಯೊಬ್ಬ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಟ ಕಲಿಕೆ ವೃದ್ಧಿಸಿಕೊಳ್ಳಲು ಉತ್ತಮ ಅವಕಾಶವನ್ನು ಕಲ್ಪಿಸಿದೆ ಎಂದು ಅಭಿಪ್ರಾಯಪಟ್ಟರು.
ಗ್ರಂಥಪಾಲಕ ಕೆಂಚಯ್ಯ, ಈ ಶಿಬಿರದಲ್ಲಿ ಮಕ್ಕಳನ್ನು ಗ್ರಂಥಾಲಯದತ್ತ ಆಕರ್ಷಿಸುವುದು ಮುಖ್ಯ ಗುರಿಯಾಗಿದ್ದು, ಶಿಬಿರದಲ್ಲಿ ಕರಕುಶಲ ಸೃಜನಶೀಲ ಕಲೆ ವೃದ್ಧಿ, ಕೌಶಲ್ಯ ಅಭಿವೃದ್ಧಿ ಮನೋರಂಜನೆ, ವಿಶೇಷ ದಿನಗಳ ಆಚರಣೆ ಎಂಬ ಮೂರು ವಿಭಾಗಗಳಿದ್ದು ಇವುಗಳಲ್ಲಿ ಸಾಕಷ್ಟು ವಿಷಯಗಳು ಅಡಗಿವೆ. ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಉಚಿತ ಸದಸ್ಯತ್ವ ಮತ್ತು ಗುರುತಿನ ಚೀಟಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.ಪ್ರೌಢಶಾಲೆಯ ಚಿತ್ರಕಲ ಶಿಕ್ಷಕ ಹನುಮಂತಪ್ಪ ಬಾರಕೇರ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ವಿಷಯದ ಕುರಿತು ತಿಳಿಸಿಕೊಟ್ಟರು.
ಪಂಚಾಯಿತಿ ಲೆಕ್ಕಾಧಿಕಾರಿ ಪ್ರವೀಣ್, ಚೈತ್ರ ಟಿ.ಸಿ, ಪಂಚಾಯಿತಿ ಡಿಇಒ ವಾಣಿ ಹಾಜರಿದ್ದರು.
ಮುಖ್ಯಾಂಶಗಳು
*ಗ್ರಂಥಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ
*ಏಪ್ರಿಲ್ 10 ರಿಂದ ಮೇ 29ರ ವರೆಗೆ ಶಿಬಿರ
*ಪ್ರತಿದಿನ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳಲ್ಲಿ ಮಾಹಿತಿ ಹಂಚಿಕೆ

