ವೈಯಕ್ತಿಕ ಕಾಂಗ್ರೆಸ್ ಪಕ್ಷ ಹಾಗೂ ಶಾಸಕರನ್ನು ದೂರುವುದು ಸರಿಯಲ್ಲ: ಶಿರಾಜುದ್ದೀನ್…..
1 min read
ವೈಯಕ್ತಿಕ ವಿಷಯಕ್ಕಾಗಿ ಕಾಂಗ್ರೆಸ್ ಪಕ್ಷ ಹಾಗೂ ಶಾಸಕರನ್ನು ದೂರುವುದು ಸರಿಯಲ್ಲ: ಶಿರಾಜುದ್ದೀನ್
ಮೂಡಿಗೆರೆ : ಕೆಲ ಮುಸ್ಲಿಂ ನಾಯಕರು ಸಂಘಟನೆ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ವಿರುದ್ಧ ಮಾತನಾಡಿರುವುದು ಖಂಡನೀಯ ಎಂದು ಬಣಕಲ್ ಗ್ರಾ.ಪಂ. ಸದಸ್ಯ ಶಿರಾಜುದ್ದೀನ್ ಹೇಳಿದರು.
ಅವರು ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಿಂದಲೇ ಕಾಂಗ್ರೆಸ್ ಪಕ್ಷವು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಪ್ರತಿನಿಧಿತ್ವ ನೀಡಿದೆ. ಇದಕ್ಕೆ ಸಾಕ್ಷಿಯಾಗಿ ರಾಷ್ಟ್ರ ಮಟ್ಟದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ದೇಶದ ಮೊದಲ ಶಿಕ್ಷಣ ಸಚಿವರಾಗಿದ್ದರು. ಫುಲಾಂ ನಬಿ ಆಜಾದ್, ಅಹ್ಮದ್ ಪಟೇಲ್, ಸಲ್ಮಾನ್ ಖುರ್ಷಿದ್ ಮುಂತಾದವರು ಕೇಂದ್ರ ಸಚಿವರು ಹಾಗೂ ರಾಜ್ಯಸಭೆ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲೂ ಕೂಡ ವಿಧಾನಸಭೆಯ ಸ್ಪೀಕರ್ ಆಗಿ ಯು.ಟಿ.ಖಾದರ್ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ಮುಸ್ಲಿಂ ನಾಯಕರನ್ನು ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರನ್ನಾಗಿಸುವ ಜತೆಗೆ ಅನೇಕ ನಾಯಕರಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ.
ಮೂಡಿಗೆರೆ ಕ್ಷೇತ್ರದಲ್ಲಿ ನಯನಾ ಮೋಟಮ್ಮ ಅವರು ಶಾಸಕರಾದ ಬಳಿಕ, ಅನೇಕ ಮುಸ್ಲಿಮರಿಗೆ ವಿವಿಧ ಹುದ್ದೆ ಹಾಗೂ ಜವಾಬ್ದಾರಿ ನೀಡಿದ್ದಾರೆ. ಸ್ಮಶಾನಕ್ಕೆ ಜಾಗ ಮೀಸಲಿರಿಸಿ ಅನೇಕ ವರ್ಷದ ಬೇಡಿಕೆ ಈಡೇರಿಸಿದ್ದಾರೆ. ಅಲ್ಲದೇ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಇಂದಿಗೂ ಶ್ರಮಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಒಕ್ಕೂಟ ರಚಿಸಲು ಪಕ್ಷಾತೀತವಾಗಿ ಸಭೆ ಕರೆಯಲಾಗಿತ್ತು. ಅಲ್ಲಿ ಕೆಲ ನಾಯಕರು ತಮ್ಮ ವಯಕ್ತಿಕ ವಿಚಾರಕ್ಕಾಗಿ ಪಕ್ಷದ ಘನತೆಗೆ ದಕ್ಕೆ ತರುವ ಕೆಲಸ ಮಾಡಿದ್ದಲ್ಲದೇ, ಸಭೆಯ ಉದ್ದೇಶ ಮರೆತು ಶಾಸಕರ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡಿರುವುದು ಸರಿಯಲ್ಲ. ಮುಖ್ಯವಾಗಿ ಆ ಸಭೆಗೆ ಅನೇಕ ಪ್ರಮುಖ ಮುಸ್ಲಿಂ ನಾಯಕರನ್ನೇ ಆಹ್ವಾನಿಸಿಲ್ಲ. ಅದೊಂದು ವಯಕ್ತಿಕ ವಿಚಾರಕ್ಕಾಗಿ ಕರೆದ ಕಾಟಾಚಾರದ ಸಭೆಯಾಗಿತ್ತೆಂದು ಹೇಳಿದರು.

