“ಶ್ರೀ ಫಲಾಹಾರಸ್ವಾಮಿ ಮಠದ ವತಿಯಿಂದ ಹಿತಾರ್ ಸಮರ್ಪಣೆ.”
1 min read
ಹತ್ತಿರವಿದ್ದು ದೂರವಿದ್ದಂತೆ ಬದುಕುತ್ತಿರುವ ಬದಲಾದ ಈ ಕಾಲಘಟ್ಟದಲ್ಲಿ ನಮ್ಮ ನಮ್ಮ ಪ್ರತಿ ಹಬ್ಬಗಳು ಆಚರಣೆಗಳು ಮಾನವೀಯ ಸಂಬಂಧಗಳನ್ನು ಮರುರೂಪಿಸಿಕೊಡಬೇಕಾದ ಸಾಮಾಜಿಕ ಜವಾಬ್ದಾರಿ ಎಲ್ಲ ಕ್ಷೇತ್ರಗಳಿಗಿಂತ ಮಠಮಾನ್ಯಗಳ ಮೇಲೆ ಅತಿಹೆಚ್ಚಿನದಾಗಿದೆ ಎಂದು ಫಲಾಹಾರಸ್ವಾಮಿ ಮಠದ ಶ್ರೀ ಮುರುಗೇಂದ್ರಸ್ವಾಮಿಗಳು ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ಜಿಲ್ಲೆಯ,ಮಲ್ಲೇನಹಳ್ಳಿ ಸಮೀಪ ಬಿಂಡಿಗ ಶ್ರೀ ದೇವಿರಮ್ಮ ದೇವಸ್ಥಾನದ ಆವರಣದಲ್ಲಿ 17/09/2023ರ ಭಾನುವಾರದಂದು ಸಂಜೆ,ಶ್ರೀ ಫಲಾಹಾರಸ್ವಾಮಿ ಮಠದ ಪರಂಪರೆ ಮತ್ತು ಸಂಪ್ರದಾಯದಂತೆ, ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಠದ ಭಕ್ತರಿಗೆ ಹಿತಾರ್ ಹೆಸರಿನಲ್ಲಿ ಪ್ರತಿ ವರ್ಷ ಹಬ್ಬದ ಮುನ್ನದಿನ ಕೊಡ ಮಾಡುವ ಜೋಡಿ ತೆಂಗಿನಕಾಯಿ,ಅಕ್ಷತೆ,ವಿಭೂತಿಯನ್ನು ಪ್ರಸಾದ ರೂಪದಲ್ಲಿ ಕೊಟ್ಟು ಆಶೀರ್ವಾದ ಮಾಡಿ ಮಾತನಾಡಿದರು.

ಚಂದ್ರದ್ರೋಣ ಪರ್ವತದ ಗಿರಿ ತಪ್ಪಲಿನ ತುತ್ತ ತುದಿಯಲ್ಲಿರುವ ಫಲಾಹಾರಸ್ವಾಮಿ ಮಠವು ಋಷಿಮುನಿಗಳ ತಪೋಕ್ಷೇತ್ರವಾಗಿದ್ದು ಅನೇಕ ಪವಾಡ ಮತ್ತು ಇತಿಹಾಸಕ್ಕೆ ಸಾಕ್ಷಿಯಾಗಿದೆ. ಬಹು ಮುಖ್ಯವಾಗಿ ಸಮಾಜದ ಶೋಷಿತ ಜನವರ್ಗದ ಜನರು ಸೇರಿದಂತೆ ಇಡೀ ಸಮಾಜದ ಕಲ್ಯಾಣಕ್ಕಾಗಿ ಶ್ರೀ ಮಠವು ಪರಂಪರೆಯಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಳ್ಳುತ್ತಾ ಬರುತ್ತಿದೆ, ಅದರಂತೆ ಹಿತಾರ್ ಕೂಡ ಒಂದು ಸಂಪ್ರದಾಯವಾಗಿದೆ,ಹಿತಾರ್ ಎಂದರೆ ಹಿರಿಯರಿಗೆ ಫಲ ಕೊಡುವುದು ಎಂದರ್ಥ, ಮಠದ ವತಿಯಿಂದ ಕೊಡ ಮಾಡಲ್ಪಟ್ಟ ಜೋಡಿ ತೆಂಗಿನಕಾಯಿಯಲ್ಲಿ ಒಂದನ್ನು ತಮ್ಮ ಕುಟುಂಬದ ಹಿರಿಯರಿಗೆ ಒಡೆದು ಪೂಜಿಸಿದರೆ ಮತ್ತೊಂದು ತೆಂಗಿನಕಾಯಿಯನ್ನು ಗೌರಿ ರೂಪದಲ್ಲಿ ಕಳಸದೊಂದಿಗೆ ಪ್ರತಿಷ್ಠಾಪಿಸುವ ಮೂಲಕ ಗೌರಿ ಗಣೇಶ ಹಬ್ಬವನ್ನು ಶ್ರೀ ಮಠದ ಭಕ್ತರು ಆಚರಿಸುತ್ತಾ ಬರುತ್ತಿದ್ದಾರೆ ಎಂದು ತಿಳಿಸಿದರು.


ಮಲ್ಲೇನಹಳ್ಳಿ, ಬಿಂಡಿಗ,ಅರಿಶಿನಕುಪ್ಪೆ, ಹೆಬ್ಬಳ್ಳಿ, ಚಿನ್ನಿಮಕ್ಕಿ ಹಲಸುಬಾಳು ಸೇರಿದಂತೆ ಹಲವು ಗ್ರಾಮದ ಸುಮಾರು 500ಕ್ಕೂ ಹೆಚ್ಚು ಕುಟುಂಬದ ಮುಖ್ಯಸ್ಥರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಗಮಿಸಿ, ಜೋಡಿ ತೆಂಗಿನಕಾಯಿಯನ್ನು ಸ್ವೀಕಾರ ಮಾಡಿ ಮಠದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಬಿಂಡಿಗ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ದೇವಿರಶೆಟ್ಟಿ,ಗ್ರಾ,ಪಂ,ಸದಸ್ಯ ಯತೀಶ್,ಊರಿನ ಮುಖಂಡರುಗಳಾದ ಬಿ.ಕೆ.ನಿಂಗೇಗೌಡ,ಪಟೇಲ್ ಬಸವರಾಜೆಗೌಡ, ಕುಲಶೇಖರ್,ಇಟ್ಟಿಗೆ ಗಣೇಶ್, ಹೆಬ್ಬಳ್ಳಿ ನಾಗೇಶ ಗೌಡ, ಅಶೋಕ್,ಆಕರ್ಷ ಅರಿಶಿನಗುಪ್ಪೆ ಇತರರರು ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




