ವಿಚಾರಗೋಷ್ಠಿಯ ಅನನ್ಯತೆ ಮತ್ತು ಮೌಲಿಕತೆಯನ್ನು ದಾಖಲಿಸಿದ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗೆ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅಭಿನಂದನೆಗಳ ಹೂ ಮಳೆ.
1 min read
ಅವಿನ್ ಟಿವಿ ಸುದ್ದಿಜಾಲ ✒️: ವಿಚಾರಗೋಷ್ಠಿಯ ಅನನ್ಯತೆ ಮತ್ತು ಮೌಲಿಕತೆಯನ್ನು ದಾಖಲಿಸಿದ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗೆ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅಭಿನಂದನೆಗಳ ಹೂ ಮಳೆ.
ಚಿಕ್ಕಮಗಳೂರು: ನಾಳೆಯ ಒಳ್ಳೆಯ ದಿನಗಳಿಗಾಗಿ ಸಮಾಜದ ಉತ್ತಮ ಭವಿಷ್ಯಕ್ಕಾಗಿ ಅನನ್ಯವಾದ ನಡೆವಳಿಕೆಗಳು ಪರಸ್ಪರ ಹುಟ್ಟಬೇಕಾಗಿದೆ, ಸಣ್ಣ ಸಣ್ಣ ಸನ್ಮಾನಗಳು ದೊಡ್ಡ ದೊಡ್ಡ ವಿದ್ಯಮಾನಗಳಾಗಿ ತೆರೆದುಕೊಳ್ಳಬೇಕಾಗಿದೆ, ಚರಿತ್ರೆ ಪುಟಗಳನ್ನು ತಿರುವಿ ಹಾಕಿದರೆ ಅಥವಾ ಶತಶತಮಾನಗಳ ಹಿಂದಿನ ದಿನಮಾನಗಳನ್ನೊಮ್ಮೆ ತಿರುಗಿ ನೋಡಿದರೆ ಈ ನೆಲದ ಅದೆಷ್ಟೋ ತಾರತಮ್ಯಗಳು, ಸಮಾಜಿಕ ಅಸಮಾನತೆಗಳು, ಭಿನ್ನಭೇದಗಳು ನೋವಿನ ಕಥಾನಕಗಳು ತೆರೆದುಕೊಳ್ಳುತ್ತವೆ, ಇಂತಹ ನೋವಿನ ಕಥಾನಕಗಳ ಉಪಶಮನಕ್ಕಾಗಿ ಅದೆಷ್ಟೋ ದಾರ್ಶನಿಕರು ಶತಶತಮಾನಗಳ ಹಿಂದೆಯೇ ಸಮ ಸಮಾಜಕ್ಕಾಗಿ, ಸಹಿಷ್ಣುತೆಯ ಬದುಕಿಗಾಗಿ ಜನಂದೋಲನಗಳನ್ನು ರೂಪಿಸಿ ಬೀದಿಗಿಳಿದು ಸತ್ಕ್ರಾಂತಿ ಮಾಡಿದ್ದರೂ ಸಹ ಈ ಸಮಾಜದ ಅನಿಷ್ಠಗಳು ಇನ್ನು ನಿರ್ಮೂಲನೆಯಾಗಿಲ್ಲ. ನಿರ್ಮೂಲನೆಯಾಗಿಲ್ಲ ಎಂದು ಹತಾಶೆಗೆ ಒಳಗಾಗುವ ಅಗತ್ಯವೂ ಇಲ್ಲ, ಆದರೆ ಈ ಬಗ್ಗೆ ಒಂದು ಸರಿಯಾದ ನೋಟಕ್ರಮ ಮತ್ತು ಆಲೋಚನಾ ವಿಧಾನವನ್ನು ಮರುರೂಪಿಸಿಕೊಳ್ಳಬೇಕಾಗಿದೆ.
ಈ ನಿಟ್ಟಿನಲ್ಲಿ , ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಚಿಕ್ಕಮಗಳೂರು ನಗರದಲ್ಲಿ ಮೂರು ದಿನಗಳ ಕಾಲ ರಾಜ್ಯಮಟ್ಟದ ವಿಚಾರಗೋಷ್ಠಿ ಮತ್ತು ಶರಣ ಸಾಹಿತ್ಯ ಪರಿಷತ್ತಿನ 40ರ ಸಂಭ್ರಮದ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ರಾಜ್ಯಮಟ್ಟದ ವಿಚಾರಗೋಷ್ಠಿಗೆ ವಿವಿಧ ಮಠಗಳ ಮಠಾಧೀಶರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ಶರಣ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳು , ವಿದ್ವಾಂಸರು, ವಿಷಯ ತಜ್ಞರು, ಬರಹಗಾರರು, ಜನಪರ ಚಳುವಳಿಗಾರರು, ಮಾಧ್ಯಮ ಮಿತ್ರರು, ವೈದ್ಯರು ವಕೀಲರು, ಕವಿ ಕಲಾವಿದರು,ಸಾಹಿತಿಗಳು, ಬಹಳ ಪ್ರಮುಖವಾಗಿ ವಿದ್ಯಾರ್ಥಿ ಯುವಜನರು ಹೀಗೆ ಅನನ್ಯ ಬಗೆಯ ಆಸಕ್ತರು ಸಾವಿರ ಸಾವಿರದ ಸಂಖ್ಯೆಯಲ್ಲಿ ಆಗಮಿಸಿ ಅರ್ಥಪೂರ್ಣವಾದ ಈ ವಿಚಾರಗೋಷ್ಠಿಗೆ ಮೂರು ದಿನಗಳ ಕಾಲವೂ ಅಲುಗಾಡದೆ ಕುಳಿತು ದನಿಯಾಗಿ ಕಿವಿಯಾಗಿ ನೆರೆಯಂತೆ ಹರಿದು ಬಂದ ವಿಚಾರಧಾರೆಯ ರಸಸ್ವಾಧಕ್ಕೆ ಮನಸೋತು ಪ್ರಭಾವಗೊಂಡವರು ಅನೇಕರು.
ಈ ವಿಚಾರಗೋಷ್ಠಿಯ ಮೂಲಕ ಅನೇಕ ಜನಪರವಾದ ಸಂಬಂಧಗಳು ಈ ಜಿಲ್ಲೆಯೊಟ್ಟಿಗೆ ಜೊತೆಗೂಡಿದವು . ಜಾತಿ ಮತ ಧರ್ಮಗಳ ಹೊಸ್ತಿಲನ್ನು ದಾಟಿ, ವಿಚಾರಗೋಷ್ಠಿಯಲ್ಲಿ ಚೆಲ್ಲಾಡಿದ ಮಣ್ಣಿನ ಮಮಕಾರದ ಮಾತುಗಳಿಂದ ಪ್ರಭಾವಿತರಾದ ಬಗ್ಗೆ ಅನೇಕರು ಮೆಚ್ಚುಗೆಯಿಂದ ಕಳಿಸಿದ ವಿಶ್ವಾಸದ ಮಾತುಗಳು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮನವನ್ನು ತುಂಬಿಸಿದವು, ಜವಾಬ್ದಾರಿಯನ್ನು ಹೆಚ್ಚಿಸಿದವು.
ಈ ನಿಟ್ಟಿನಲ್ಲಿ, ಅರ್ಥಪೂರ್ಣವಾದ ವಿಚಾರಗೋಷ್ಠಿಯನ್ನು ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿ, ಜ್ಞಾನ ದಾಸೋಹ ಮತ್ತು ಅನ್ನದಾಸೋಹವನ್ನು ನಿರಂತರ ಮೂರು ದಿನಗಳ ಕಾಲ ನಿತ್ಯ ಸಾವಿರಾರು ಜನರಿಗೆ ಉಣಪಡಿಸಿದ್ದಕ್ಕಾಗಿ ಕರ್ನಾಟಕ ಜಾನಪದ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸಂಯುಕ್ತವಾಗಿ ಇತ್ತೀಚಿಗೆ ಚಿಕ್ಕಮಗಳೂರಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಿ, ವಿಚಾರಗೋಷ್ಠಿಗೆ ಸಕ್ರಿಯವಾಗಿ ದುಡಿದ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ, ಸಂಘಟಕರಿಗೆ ಸನ್ಮಾನವಿತ್ತು , ಹೂ ಮಳೆಯೊಂದಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷದ ಪ್ರಮುಖರು ,ಹಲವು ಸಂಘ ಸಂಸ್ಥೆಗಳ ಮುಖಂಡರು, ಮಾಧ್ಯಮದ ಮಿತ್ರರು ಸೇರಿದಂತೆ ಅನೇಕರು ಭಾಗವಹಿಸಿ ಮಾತನಾಡಿದರು .
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

