ಫೆಬ್ರವರಿ 02ರಂದು ಆಲ್ದೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಬೃಹತ್ ಗಾತ್ರದ ಕಂಚಿನ ಪುತ್ತಳಿ ಅನಾವರಣ:….
1 min read
ಅವಿನ್ ಟಿವಿ ಸುದ್ದಿಜಾಲ ✒️: ಫೆಬ್ರವರಿ 02ರಂದು ಆಲ್ದೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಬೃಹತ್ ಗಾತ್ರದ ಕಂಚಿನ ಪುತ್ತಳಿ ಅನಾವರಣ: 
ಡಿ. ಬಿ. ಅಶೋಕ್
ಚಿಕ್ಕಮಗಳೂರು ಜ 29, ಆಲ್ದೂರಿನ ಹೃದಯ ಭಾಗವಾದ ಬಸ್ ಸ್ಟ್ಯಾಂಡ್ ಸಮೀಪದ ಕೆಂಪೇಗೌಡ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಬೃಹತ್ ಗಾತ್ರದ ಕಂಚಿನ ಪುತ್ತಳಿ ನಿರ್ಮಿಸಲಾಗಿದ್ದು ಫೆ 02 ರಂದು ಪ್ರತಿಮೆಯ ಲೋಕಾರ್ಪಣೆಯಾಗಲಿದೆ.
ಆಲ್ದೂರು ವಲಯ ಒಕ್ಕಲಿಗರ ಸಂಘದಿಂದ 24 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೆಂಪೇಗೌಡರ ಪ್ರತಿಮೆ 2,400 ಕೆಜಿ ತೂಕ, 13 ಅಡಿ ಎತ್ತರ, 6 ಅಡಿ ಅಗಲ, 16 ಅಡಿ ಉದ್ದವಿದ್ದು, ಬೆಂಗಳೂರಿನ ಶಿಲ್ಪಿ ವಿಜಯ್ ಪುತ್ತಳಿಯನ್ನು ನಿರ್ಮಿಸಿದ್ದಾರೆ.
ಆಲ್ದೂರಿನ ವಲಯ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಗುರುವಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು,ಇದೇ ವೇಳೆ ಮಾತನಾಡಿದ ಆಲ್ದೂರು ವಲಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಡಿ.ಬಿ. ಅಶೋಕ್ ಒಕ್ಕಲಿಗ ಸಮುದಾಯದಿಂದ ದೇಣಿಗೆ ಸಂಗ್ರಹಿಸಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು ಕೆಂಪೇಗೌಡರ ಪುತ್ತಳಿ ಸ್ಥಾಪನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೇ ಪ್ರಥಮವಾಗಿದೆ ಎಂದು ಹೇಳಿದರು.
ಫೆ 02 ರಂದು ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಪುತ್ತಳಿಯನ್ನು ಅನಾವರಣಗೊಳಿಸಲಿದ್ದು ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ತು ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್, ರಾಜ್ಯ ಯುವಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ವಿಧಾನಪರಿಷತ್ತು ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್. ಭೋಜೇಗೌಡ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್, ರಾಜ್ಯ ನಿರ್ದೇಶಕ ಐ.ಎ.ಪೂರ್ಣೇಶ್, ವಲಯ ಸಂಘದ ಗೌರವಾಧ್ಯಕ್ಷ ಎಚ್.ಎಸ್. ಕವೀಶ್, ಉಪಾಧ್ಯಕ್ಷ ಸಂಪತ್ ಹೆಡೆದಾಳು, ಆಲ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜುಬೇಧ ಹಸೈನಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿಮೆ ಲೋಕಾರ್ಪಣೆಯ ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯ, ಎಲ್ಲಾ ಸಂಘ ಸಂಸ್ಥೆಗಳನ್ನೂ ಆಹ್ವಾನಿಸಲಾಗಿದೆ, ಕಾರ್ಯಕ್ರಮದ ದಿನ ಆರು ಸಾವಿರ ಜನರಿಗೆ ಎರಡೂ ಹೊತ್ತು ಅನ್ನದಾನ ನಡೆಯಲಿದೆ ಎಂದರು.
ಸಂಘದ ಕಾರ್ಯದರ್ಶಿ ಡಿ.ಎಸ್. ವಸಂತ್ ಕುಮಾರ್, ಸಮುದಾಯದ ಮುಖಂಡರಾದ ಎಚ್.ಕೆ.ರಮೇಶ್,ಧರ್ಮೇಶ್ ಉಪಸ್ಥಿತರಿದ್ದರು.
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

