ನಮ್ಮ ಮನಸ್ಸನ್ನು ನಾವು ಮೊದಲು ಸರಿಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಸಾಮಾಜಿಕ ಪರಿವರ್ತನೆ ಅಸಾಧ್ಯ….
1 min read
ಅವಿನ್ ಟಿವಿ ಸುದ್ದಿಜಾಲ ✒️: ನಮ್ಮ ಮನಸ್ಸನ್ನು ನಾವು ಮೊದಲು ಸರಿಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಸಾಮಾಜಿಕ ಪರಿವರ್ತನೆ ಅಸಾಧ್ಯ
~ ಕಲ್ಯಾಣ ನಗರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಮನಸ್ಸುಗಳೊಂದಿಗೆ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮಾತುಕತೆ.
ಚಿಕ್ಕಮಗಳೂರು ಜ 21: ಸಮಾಜವನ್ನು ಸಮಾಧಾನ ಮಾಡುವುದು ಬೇರೆ, ಪರಿವರ್ತಿಸುವುದು ಬೇರೆ, ನಮ್ಮ ಸಮಾಧಾನದ ಮಾತುಗಳಿಗಿಂತ ಪರಿವರ್ತನೆಯ ನುಡಿಮುಖ್ಯ.
12ನೇ ಶತಮಾನದ ವಚನ ಚಳುವಳಿಯು ರೂಪಿಸಿದ್ದು ಪರಿವರ್ತನೆಯ ಮಾರ್ಗವನ್ನು, ಮಾನವೀಯತೆ, ಸಮಾನತೆ, ಮನುಷ್ಯ ಪ್ರೀತಿ, ಸಕಲ ಚರಾಚರ ಜೀವಿಗಳ ಮೇಲಿನ ಜೀವ ಕಾರುಣ್ಯದೊಂದಿಗೆ ಜ್ಞಾನದ ಪಥದಲ್ಲಿ ಸಾಗಿದ ವಚನಕಾರರ ಆಶಯಗಳನ್ನು ನಾವು ಇದ್ದಂತೆ ಇಡಿಯಾಗಿ ಸ್ವೀಕರಿಸಿ ಅನುಷ್ಠಾನಗೊಳಿಸಿಕೊಳ್ಳುವಲ್ಲಿ ಎಷ್ಟರ ಮಟ್ಟಿಗೆ ಸಾಪಲ್ಯ ಕಂಡಿದ್ದೇವೆ ? ಧರ್ಮವನ್ನು ಮುನ್ನಲೆಗಿಟ್ಟು ಮಾತನಾಡಬೇಕೊ ?ಅಥವಾ ತತ್ವವನ್ನು ಮುನ್ನೆಲೆಗೆ ಇಟ್ಟು ಒಂದು ಸೃಜನಶೀಲತೆಯೊಂದಿಗೆ ಕ್ರಿಯಾತ್ಮಕವಾಗಿ ಸಮಾಜದೊಟ್ಟಿಗೆ ಸಂವಾದಿಸಬೇಕೊ ? ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕಾಗಿದೆ ಹಾಗೂ ಈ ವಿಚಾರವಾಗಿ ಬೆರಳು ತೋರಿಸಿ ನಿಖರವಾದ ಮಾತನಾಡಬೇಕಾಗಿದೆ. ಇಂತಹ ಹತ್ತು ಹಲವು ವಿಷಯಗಳೊಂದಿಗೆ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವಚನಗಳ ಪಾರಂಪರಿಕ ಓದು ಮತ್ತು ಪಲ್ಲಟಗಳ ಹೊಸ ಸಾಧ್ಯತೆ ಕುರಿತು ಹೊಸ ರೀತಿಯ ಪಯಣ ಮಾಡಲಿದೆ.
ಈ ಸಂಬಂಧ 2026ರ ಫೆಬ್ರವರಿ 09ರಿಂದ 11ರ ವರೆಗೆ ಚಿಕ್ಕಮಗಳೂರು ನಗರದಲ್ಲಿ ಮೂರು ದಿನಗಳ ಕಾಲ ನಡೆಯುವ ಶರಣ ಸಾಹಿತ್ಯ ಪರಿಷತ್ತಿನ 40ರ ಸಂಭ್ರಮ ಹಾಗೂ ವಿಚಾರಗೋಷ್ಠಿಯ ಯಶಸ್ವಿಗೋಸ್ಕರ , ಕಲ್ಯಾಣ ನಗರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಮನಸ್ಸುಗಳೊಂದಿಗೆ ಪೂರ್ವ ಸಿದ್ಧತಾ ಸಭೆಯನ್ನು ನಡೆಸಿ ಸಲಹೆ ಸಹಕಾರ ಕೋರಿ ಮತ್ತು ಭಾಗವಹಿಸುವಿಕೆಗೆ ಬಗ್ಗೆ ಚರ್ಚಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಪರಿಷತ್ತಿನ ಅಧ್ಯಕ್ಷರಾದ ರವೀಶ್ ಕ್ಯಾತನಬೀಡು ವಹಿಸಿದ್ದರು, ಕಲ್ಯಾಣನಗರ ಸಾಹಿತ್ಯ ವೇದಿಕೆಯ ಮುಖಂಡರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಈ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
•••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

