ಚಲಾಯಿಸುತ್ತಿದ್ದ ಬಸ್ಸಿನ ಬ್ರೇಕ್ ಅನ್ನು ಒತ್ತಿ ನಿಲ್ಲಿಸಿ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿ ಪ್ರಜ್ಞೆ ತಪ್ಪಿ ಬಿದ್ದ ಚಾಲಕ….
1 min read
ಅವಿನ್ ಟಿವಿ ಸುದ್ದಿಜಾಲ ✒️: ಚಲಾಯಿಸುತ್ತಿದ್ದ ಬಸ್ಸಿನ ಬ್ರೇಕ್ ಅನ್ನು ಒತ್ತಿ ನಿಲ್ಲಿಸಿ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿ ಪ್ರಜ್ಞೆ ತಪ್ಪಿ ಬಿದ್ದ ಚಾಲಕ.
ಕೊಪ್ಪ ಫೆ ೧೨ : ಜಗತ್ತಿನಲ್ಲಿ ಬರೀ ಬೇಡದ ಸಂಗತಿಗಳಿವೆಯೆಂದು ಅನಿಸುವ ಹೊತ್ತಿಗೇ ಒಳ್ಳೆಯ ಸುದ್ದಿಗಳು ಯಾರ ಕಣ್ಣಿಗೂ ಬೀಳದೇ ಹಾಗೆಯೇ ಮರೆಯಾಗಿಹೋಗುತ್ತಿರುತ್ತವೆ. ಒಳ್ಳೆಯ ಸುದ್ದಿ ಮೆಟ್ಟಲಿಳಿಯಲು ಯೋಚಿಸುವ ಹೊತ್ತಿಗೆ ಕೆಟ್ಟ ಸುದ್ದಿ ಅರ್ಧ ಊರು ಸುತ್ತಿರುತ್ತದೆ. ಹೀಗಾಗಿ ಅಂತಹ ಮಾನವೀಯತೆಯ ಪರೋಪಕಾರದ ಸುದ್ದಿಗಳು ಪ್ರಕಟವಾಗುವುದು ಬಹಳ ಕಡಿಮೆ.
ಕೊಪ್ಪದ ಹತ್ತಿರದ ಅಗಳಗಂಡಿಯ ಒಬ್ಬ ಚಾಲಕರು ತಮಗೆ ಆರೋಗ್ಯ ಕೈಕೊಡುತ್ತಿದೆ ಎಂಬ ಸೂಚನೆ ಸಿಕ್ಕೊಡನೆ ಒತ್ತಿ ಒತ್ತಿ ಬರುತ್ತಿರುವ ನೋವಿನಲ್ಲೂ ತಾವು ಚಲಾಯಿಸುತ್ತಿದ್ದ ಬಸ್ಸನ್ನು ಕ್ಷಣಮಾತ್ರದಲ್ಲಿ ಬದಿಗೆ ನಿಲ್ಲಿಸಿ ಪ್ರಯಾಣಿಕರನ್ನು ಬಹುದೊಡ್ಡ ಅಪಾಯದಿಂದ ಪಾರು ಮಾಡಿ ಪ್ರಜ್ಞಾಶೂನ್ಯರಾದ ಘಟನೆಯು ನೆನ್ನೆ ನಡೆದಿದೆ.
ಕೊಪ್ಪ ತಾಲೂಕಿನ ಅಗಳಗಂಡಿಯ ರಮೇಶ್ ಶೆಟ್ಟಿ ಎಂಬ ಹೆಸರಿನ ಚಾಲಕರಿಗೆ ಬಸ್ ಓಡಿಸುತ್ತಿರುವಾಗಲೇ ತೀರ್ಥಹಳ್ಳಿ ಹತ್ತಿರ ತೀವ್ರ ಎದೆನೋವು ಪ್ರಾರಂಭವಾಗಿ ಮೂರ್ಛಾವಸ್ಥೆಗೆ ಹೋಗುತ್ತಿದ್ದರೂ ಓಡುತ್ತಿದ್ದ ಬಸ್ ಅನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದ್ದಾರೆ.
ಅದಾದ ಮೇಲೆ ತಕ್ಷಣವೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ, ಅವರೇನಾದರೂ ಒಂದೆರಡು ಕ್ಷಣ ತಡ ಮಾಡಿದ್ದರೆ ಬಸ್ ನಲ್ಲಿದ್ದ ಪ್ರಯಾಣಿಕರ ಕಥೆ ಏನಾಗುತ್ತಿತ್ತೋ ಗೊತ್ತಿಲ್ಲ, ಅಂತಹ ಸಂದರ್ಭದಲ್ಲಿಯೂ ಪ್ರಯಾಣಿಕರ ಬಗ್ಗೆ ಯೋಚನೆ ಮಾಡಿ ಸುರಕ್ಷತಯಿಂದ ಕಾಪಾಡಿದ ಈ ಚಾಲಕರು ನಿಜವಾಗಿಯೂ ಶ್ಲಾಘನೆಗೆ ಅರ್ಹರು.
ರಮೇಶ ಶೆಟ್ಟಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಬೇಗ ಗುಣಮುಖರಾಗಲಿ ಎಂದು ಬಸ್ ನಲ್ಲಿದ್ದ ಪ್ರಯಾಣಿಕರು ಮತ್ತು ಸಾರ್ವಜನಿಕರು ಹಾರೈಸುತ್ತಿದ್ದಾರೆ ಎಂದು ಲೇಖಕಿ ದೀಪಾ ಹಿರೇಗುತ್ತಿ ತಿಳಿಸಿದ್ದಾರೆ.
•••••••••••••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

