ಕೇಂದ್ರ ಬಜೆಟ್ನಲ್ಲಿ ಕಾಫಿ ಉದ್ಯಮದ ಬಗ್ಗೆ ಯಾವುದೇ ಪ್ರಸ್ತಾವನೆಯನ್ನೂ ಮಾಡದೆ ಸಂಪೂರ್ಣವಾಗಿ ಕಡೆಗಣಿಸಲಾಗಿಸಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಹೊಲದಗದ್ದೆ ಗಿರೀಶ್ ತಿಳಿಸಿದ್ದಾರೆ…
1 min read
ಚಿಕ್ಕಮಗಳೂರು: ಈ ಬಾರಿ ಕೇಂದ್ರ ಬಜೆಟ್ನಲ್ಲಿ ಕಾಫಿ ಉದ್ಯಮದ ಬಗ್ಗೆ ಯಾವುದೇ ಪ್ರಸ್ತಾವನೆಯನ್ನೂ ಮಾಡದೆ ಸಂಪೂರ್ಣವಾಗಿ ಕಡೆಗಣಿಸಲಾಗಿಸಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಹೊಲದಗದ್ದೆ ಗಿರೀಶ್ ತಿಳಿಸಿದ್ದಾರೆ.
ಪ್ರತಿ ವರ್ಷ ಅತೀ ಹೆಚ್ಚು ವಿದೇಶಿ ವಿನಿಮಯವನ್ನು ತಂದುಕೊಡುವ ಜೊತೆಗೆ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿ, ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಾಫಿ ಕೃಷಿಗೆ ಉತ್ತೇಜನ ನೀಡುವ ಯಾವುದೇ ಕಾರ್ಯಕ್ರಮವನ್ನು ಘೋಷಿಸದೆ ಇರುವುದು, ಬೆಳೆಗಾರರು, ಕಾರ್ಮಿಕರು ಮತ್ತು ಕಾಫಿಯನ್ನೇ ಅವಲಂಭಿಸಿರುವ ಕುಟುಂಬಗಳಿಗೆ ಎಸಗಿರುವ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ಹವಾಮಾನ ವೈಪರೀತ್ಯ, ಕಾಂಡಕೊರಕ, ಕಾಯಿಕೊರಕದಂತಹ ರೋಗಬಾಧೆ, ಕಾರ್ಮಿಕರ ಕೊರತೆ, ಮಾರುಕಟ್ಟೆ ಏರಿಳಿತ, ಕಾಡಾನೆ, ಕಾಡು ಪ್ರಾಣಿಗಳ ಹಾವಳಿಗಳಿಂದ ಸೊರಗುತ್ತಿರುವ ಉದ್ಯಮದ ಪುನಶ್ಚೇತನಕ್ಕೆ ಬಜೆಟ್ನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಘೋಷಿಸಿಲ್ಲ. ಗೊಬ್ಬರ ಸೇರಿದಂತೆ ತೋಟಗಳ ನಿರ್ವಹಣೆಗೆ ಅಗತ್ಯ ಸಲಕರಣೆಗಳು ಹಾಗೂ ಮೂಲ ಸೌಕರ್ಯಗಳಿಗೆ ಸಹಾಯಧನವಾಗಲಿ, ವಿಶೇಷ ಸಾಲ ಸೌಲಭ್ಯಳ ಬಗ್ಗೆಯಾಗಲಿ ಬಜೆಟ್ನಲ್ಲಿ ಚಕಾರವೆತ್ತದಿರುವುದು ಉದ್ಯಮವನ್ನು ಇನ್ನಷ್ಟು ಸಂಕಷ್ಠಕ್ಕೆ ತಳ್ಳುವಂತಹದ್ದಾಗಿದೆ ಎಂದಿದ್ದಾರೆ.
ಇದರ ನಡುವೆ ಸರ್ಫೇಸಿ ಕಾಯಿದೆಯು ಬೆಳೆಗಾರರ ಪಾಲಿಗೆ ಮರಣ ಶಾಸನವಾಗಿರುವುದು ಕಾಫಿ ಬೆಳೆಯುವ ಪ್ರದೇಶದ ಎಲ್ಲಾ ಸಂಸದರಿಗೂ ತಿಳಿದ ವಿಚಾರವಾಗಿದ್ದರೂ ಕಾಯಿದೆಗೆ ತಿದ್ದುಪಡಿ ತಂದು ಬೆಳೆಗಾರರು ಮತ್ತು ಅವರ ಆಸ್ತಿ,ಪಾಸ್ತಿ ರಕ್ಷಿಸುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಿ ಧೈರ್ಯ ತುಂಬುವ ಕೆಲಸವನ್ನೂ ಮಾಡಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಬಾಳೆಹೊನ್ನೂರಿನಲ್ಲಿ ನಡೆದ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭಕ್ಕೆ ಬಂದಿದ್ದ ಕೇಂದ್ರ ಸಚಿವರುಗಳು, ಕಾಫಿ ಬೋರ್ಡ್ ಅಧ್ಯಕ್ಷರು, ಅಧಿಕಾರಿಗಳು ಕಾಫಿ ಉದ್ಯಮದ ಅಭಿವೃದ್ಧಿಗೆ ಸಾಕಷ್ಟು ನೆರವು ಕಲ್ಪಿಸುವ ಬಗ್ಗೆ ನೀಡಿದ್ದ ಭರಪೂರ ಭರವಸೆಗಳೆಲ್ಲವೂ ಬಜೆಟ್ನಲ್ಲಿ ಹುಸಿಯಾಗಿದೆ. ಸಮಾರಂಭದಲ್ಲಿ ಸಚಿವರು ಪ್ರಸ್ತಾಪಿಸಿದ ಯಾವೊಂದು ವಿಚಾರವೂ ಬಜೆಟ್ನಲ್ಲೀ ಕಾಣದಿರುವುದು ತೀವ್ರ ನಿರಾಸೆ ತಂದಿದೆ ಎಂದಿದ್ದಾರೆ.
ಕಾಫಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದರೂ ಜಿಲ್ಲೆಗೊಂದು ಇಎಸ್ಐ ಅಸ್ಪತ್ರೆ ಬೇಕೆನ್ನುವ ಬೇಡಿಕೆಗೆ ಬಜೆಟ್ನಲ್ಲಿ ಮನ್ನಣೆ ಸಿಕ್ಕಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಸ್ಥಾನ ಕಲ್ಪಿಸುವುದು, ಗುಣಮಟ್ಟದ ಕಾಫಿಯನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಬ್ರಾಂಡಿಂಗ್ ವ್ಯವಸ್ಥೆ ರೂಪಿಸಲು ಅಗತ್ಯ ಯೋಜನೆ ರೂಪಿಸುವ ಪ್ರಸ್ತಾವನೆ ಮಾಡಲಾಗಿಲ್ಲ. ಕಾಫಿ ಟೆಕ್ ಪಾರ್ಕ್ ಸ್ಥಾಪಿಸಿ ಉದ್ಯಮವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನೀಡಲಾಗಿದ್ದ ಭರವಸೆಗಳೆಲ್ಲವೂ ಬಜೆಟ್ನಲ್ಲಿ ಹುಸಿಗೊಳಿಸಲಾಗಿದೆ ಎಂದು ದೂರಿದ್ದಾರೆ.
ರೈಲ್ವೇ ಸೇವೆಯಲ್ಲೂ ಜಿಲ್ಲೆ ಸಂಪೂರ್ಣ ಹಿಂದೆ ಬಿದ್ದಿದೆ. ಜಿಲ್ಲಾ ಕೇಂದ್ರ ನಾಮಕಾವಸ್ತೆಗೆ ರೈಲ್ವೆ ಸಂಪರ್ಕ ಹೊಂದಿದೆ. ಕೇವಲ ಒಂದೆರಡು ರೈಲು ಮಾತ್ರ ಸಂಚರಿಸುತ್ತಿವೆ. ಇದರ ಜಾಲವನ್ನು ಮತ್ತಷ್ಟು ವಿಸ್ತರಿಸಿ ಪ್ರಯಾಣಿಕರಿಗೂ ಅನುಕೂಲ ಕಲ್ಪಿಸಿ ರೈಲ್ವೆಗೂ ಸಾಕಷ್ಟು ಆದಾಯ ತಂದುಕೊಡಲು ಅವಕಾಶವಿದ್ದರೂ ಹೊಸ ರ್ಯಲುಗಳ ಬಗ್ಗೆಯಾಗಲಿ, ಹೊಸ ಮಾರ್ಗಗಳಿಗಾಗಲಿ ಒತ್ತು ನೀಡದಿರುವುದು ಜಿಲ್ಲೆಗಾದ ಅನ್ಯಾಯ ಎಂದಿದ್ದಾರೆ.
ಇದೆಲ್ಲದಕ್ಕೂ ಇಲ್ಲಿನ ಸಂಸದರ ನಿಷ್ಕ್ರೀಯತೆಯೇ ಕಾರಣವಾಗಿದೆ. ಅವರೂ ಸೇರಿದಂತೆ ಇತೆರೆ ಮುಖಂಡರು ಕೇಂದ್ರದ ಗಮನ ಸೆಳೆದು ಒತ್ತಡ ತರುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.

