ಕೆಲವೊಮ್ಮೆ ಅಪರೂಪದಲ್ಲಿ ಅಪರೂಪಕ್ಕೆ ಹೀಗೊಮ್ಮೆ ಘಟಿಸುತ್ತವೆ. ಬಾಲ್ಯದ ಗೆಳೆಯ ಗೆಳತಿಯರಿಬ್ಬರು ಮತ್ತೆ ಒಂದಾಗಿ ಕೂಡಿದ ಕಥನದಂತಿರುವ ಘಟನೆಯಿದು….
1 min read
ಅವಿನ್ ಟಿವಿ ಸುದ್ದಿಜಾಲ ✒️: ಕೆಲವೊಮ್ಮೆ ಅಪರೂಪದಲ್ಲಿ ಅಪರೂಪಕ್ಕೆ ಹೀಗೊಮ್ಮೆ ಘಟಿಸುತ್ತವೆ. ಬಾಲ್ಯದ ಗೆಳೆಯ ಗೆಳತಿಯರಿಬ್ಬರು ಮತ್ತೆ ಒಂದಾಗಿ ಕೂಡಿದ ಕಥನದಂತಿರುವ ಘಟನೆಯಿದು.
ಚಿಕ್ಕಮಗಳೂರು: ಇದೊಂಥರಾ ಚೆನ್ನಾಗಿದೆ ನೋಡಿ. ಹುಡುಗ ಹುಡುಗಿ ಮ್ಯಾಟ್ರಿಮೋನಿಯಲ್ ಸೈಟೊಂದರ ಮೂಲಕ ಪರಿಚಯವಾದರು. ಪರಿಚಯವಾದ ನಂತರ ಗೊತ್ತಾಯಿತು ಅವರಿಬ್ಬರ ಪಾಲಕರೂ ಕಳೆದ 20 ವರ್ಷಗಳ ಹಿಂದೆ ಮೈಸೂರಿನ ಕೆ ಆರ್ ನಗರದ ಬಡಾವಣೆಯೊಂದರಲ್ಲಿ ನ ಅಕ್ಕಪಕ್ಕದ ಮನೆಯಲ್ಲಿ ಬಾಡಿಗೆಗೆ ಇದ್ದರು ಎಂದು. ಆಗ ಪುಟ್ಟ ಪುಟ್ಟ ಮಕ್ಕಳಾಗಿದ್ದ ಈ ಹುಡುಗ ಹುಡುಗಿ ಕೈ ಕೈ ಹಿಡಿದು ಬೀದಿ ತುಂಬ ಆಟವಾಡುತ್ತಾ ಬಾಲ್ಯವನ್ನು ಕಳೆದಿದ್ದರು.
ಪುಟಾಣಿ ಮಕ್ಕಳಾಗಿದ್ದಾಗಲೇ ಕೈ ಕೈ ಹಿಡಿದುಕೊಂಡು ಜೊತೆಗೂಡಿ ಆಟವಾಡಿ ನಲಿದು ನಕ್ಕು ಕಿತಾಪತಿ ಮಾಡಿಕೊಂಡವರು ತದನಂತರ ಅವರ ಪೋಷಕರು ವೃತ್ತಿ ಬದುಕಿನ ನಿಮಿತ್ತ ಬೇರೆ ಬೇರೆ ಊರಿಗೆ ವರ್ಗಾವಣೆಗೊಂಡ ಕಾರಣ ಈ ಎರಡು ಕುಟುಂಬಗಳು ಅಂದು ಬೇರೆ ಬೇರೆ ಕಡೆ ಹೋದರು, ಬಾಲಕನ ಕಡೆಯವರು ಚಿಕ್ಕಮಗಳೂರಿಗೆ ಬಂದರೆ ಈ ಬಾಲಕಿಯ ಕಡೆಯವರು ಬೆಂಗಳೂರಿಗೆ ಹೋದರು, ಅಲ್ಲಿಗೆ ಈ ಎರಡು ಮನೆತನದ ಸಂಪರ್ಕ ಸಂಪೂರ್ಣ ಕಡಿದು ಹೋಗಿ ಎಲ್ಲ ಮರೆತು ಹೋಗಿತ್ತು.
ಸಮಾಜಿಕ ಜಾಲತಾಣವಾದ ಮ್ಯಾಟ್ರಿಮೋನಿಯು ಮರೆಯಾಗಿ ಮರೆತು ಹೋಗಿದ್ದ ಈ ಹುಡುಗ ಹುಡುಗಿಯನ್ನು ಮತ್ತೆ ಒಂದೇ ಗೂಡಿನ ಹಕ್ಕಿಗಳಾಗಿ ಮಾಡಿದೆ.
ಈಗ ಇವರಿಬ್ಬರೂ ನಿಜಜೀವನದಲ್ಲೂ ಜತೆಯಾಗಿ ಬದುಕುವ ನಿರ್ಧಾರ ಕೈಗೊಂಡು, ಮೊನ್ನೆಯಷ್ಟೇ ಕೈ ಕೈ ಹಿಡಿದು ಸಪ್ತಪದಿಯನ್ನೂ ತುಳಿದು ಬಾಳ ಸಂಗಾತಿಗಳಾಗಿದ್ದಾರೆ.
ಕೆಲವೊಮ್ಮೆ ನಾಟಕ ಮತ್ತು ಸಿನಿಮಾಗಳಲ್ಲಿ ಮಾತ್ರ ಆಗುವ ಸಂಗತಿಗಳು ನಿಜಜೀವನದಲ್ಲೂ ನಡೆಯುತ್ತವೆ ಎನ್ನುವುದಕ್ಕೆ ಉದಾಹರಣೆಯಾಗಿದೆ ಈ ಸಂಗತಿ.
ಈ ಹುಡುಗನ ಹೆಸರು ಮಯೂರ ವೃತ್ತಿಯಲ್ಲಿ ಇಂಜಿನಿಯರ್, ಹುಡುಗಿಯ ಹೆಸರು ಕೃಪಾ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ , ಅಂದಹಾಗೆ ಇವರಿಬ್ಬರೂ ನಮ್ಮ ಚಿಕ್ಕಮಗಳೂರಿನಲ್ಲಿ ಉಪನ್ಯಾಸಕರಾಗಿರುವ ಸಾಹಿತಿ ಮತ್ತು ವಿಮರ್ಶಕ ಡಾ. ಎಚ್ ಎಸ್ ಸತ್ಯನಾರಾಯಣ ಅವರ ಮಗ ಮತ್ತು ಸೊಸೆ.
••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

