ಕಾರ್ಮಿಕರ ಮತ್ತು ರೈತ ವಿರೋಧಿ ಕಾಯಿದೆ ವಿರೋಧಿಸಿ ಫೆ.12ರಂದು ಟಿಯುಸಿಐ ನಿಂದ ಪ್ರತಿಭಟನೆ* ..
1 min read
*ಕಾರ್ಮಿಕರ ಮತ್ತು ರೈತ ವಿರೋಧಿ ಕಾಯಿದೆ ವಿರೋಧಿಸಿ ಫೆ.12ರಂದು ಟಿಯುಸಿಐ ನಿಂದ ಪ್ರತಿಭಟನೆ*
ಕಾರ್ಮಿಕರ ಮತ್ತು ರೈತ ವಿರೋಧಿ ಕಾಯಿದೆ ರದ್ದುಪಡಿಸಿ ಮನರೇಗಾ ಯೋಜನೆ ಮರು ಜಾರಿಗೊಳಿಸಬೇಕೆಂದು ಆಗ್ರಹಿಸಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ವತಿಯಿಂದ ಫೆ.12ರಂದು ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಮಿಕರ ಸುಧಾರಣೆಗಾಗಿ ಹೋರಾಟ, ತ್ಯಾಗ, ಬಲಿದಾನದ ಮೂಲಕ ಪಡೆದಂತಹ ಕಾರ್ಮಿಕರ ಪರವಿದ್ದ 29 ಕಾರ್ಮಿಕ ಕಾನೂನು ರದ್ದುಗೊಳಿಸಿ, ಕಾರ್ಮಿಕರ ವಿರುದ್ಧ 4 ಕಾರ್ಮಿಕ ಸಂಹಿತೆ ಹಾಗೂ ರೈತ ವಿರೋಧಿಯಾದ ಬೀಜ ಮಸೂದೆ, ವಿದ್ಯುತ್ ಶಕ್ತಿ ಮಸೂದೆ ಜಾರಿಗೊಳಿಸಲಾಗಿದೆ. ಈ ಮಸೂದೆ ಜೊತೆಗೆ ಭೂಸ್ವಾಧೀನ ಕಾಯಿದೆಯನ್ನು ಕೂಡ ಹಿಂಪಡೆಯಬೇಕು. ಮನರೇಗಾ ಯೋಜನೆ ಪುನಃ ಸ್ಥಾಪಿಸಬೇಕು. ಈ ಹಿನ್ನಲೆಯಲ್ಲಿ ದೇಶಾಧ್ಯಂತ ಫೆ.12ರಂದು ಕಾರ್ಮಿಕ ಹಾಗೂ ರೈತ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, ಇದಕ್ಕೆ ನಮ್ಮ ಸಂಘಟನೆ ಬೆಂಬಲಿಸಿದ್ದು, ಅದೇ ದಿನ ಮೂಡಿಗೆರೆ ತಾಲೂಕು ಕಚೇರಿ ಎದುರು ಮುಷ್ಕರ ನಡೆಸಲಾಗುವುದು ಎಂದು ಹೇಳಿದರು.
ದೇಶದ ಸಕಲ ಸಂಪತ್ತನ್ನು ಉತ್ಪಾದಿಸಿದವರು ಕಾರ್ಮಿಕರು. ಒಂದು ವೇಳೆ ಕಾರ್ಮಿಕರ ಮತ್ತು ರೈತ ವಿರೋಧಿ ಕಾಯಿದೆ ಜಾರಿಯಾದರೆ ದುಡಿಯುವ ವರ್ಗದ ಎಲ್ಲಾ ಹಕ್ಕುಗಳನ್ನು ಕಿತ್ತುಕೊಂಡು, ಕಾರ್ಮಿಕರನ್ನು ಗುಲಾಮಗಿರಿ ವ್ಯವಸ್ಥೆಗೆ ನೂಕಿ, ಯೂನಿಯನ್ ಮುಕ್ತ ಮಾಡುವ ಸಂಚು ರೂಪಿಸಲಾಗಿದೆ. ಅಲ್ಲದೇ ಈ ಕಾಯಿದೆ ಮೂಲಕ ದೇಶದ ಸಂಪತ್ತನೆಲ್ಲ ಕಾರ್ಪೊರೇಟರ್ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಭೂಮಾಲೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಾಗಿದೆ. ಹಾಗಾಗಿ ಎಲ್ಲಾ ರೈತರು, ದಲಿತರು, ಆದಿವಾಸಿಗಳು, ಕೈಗಾರಿಕಾ ಕ್ಷೇತ್ರದ ಕಾರ್ಮಿಕರು ಒಗ್ಗೂಡುವುದು ಅವಶ್ಯಕವಾಗಿದ್ದು, ಫೆ.12ರಂದು ನಡೆಸುವ ಪ್ರತಿಭಟನೆಗೆ ಎಲ್ಲಾ ದುಡಿಯುವ ವರ್ಗದ ಕಾರ್ಮಿಕರು ರೈತಾಪಿ ವರ್ಗ ಆಗಮಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಟಿಯುಸಿಐ ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಹಾಂದಿ ಉಪಸ್ಥಿತರಿದ್ದರು.

