ಅಪಘಾತದಲ್ಲಿ ಮೃತಪಟ್ಟವರು ಬೆಳಗಾವಿ ಮಹಿಳಾ ಪಿಎಸ್ ಐ ಮತ್ತು ಕುಟುಂಬ #avintvcom

ಅಪಘಾತದಲ್ಲಿ ಮೃತಪಟ್ಟವರು ಬೆಳಗಾವಿ ಮಹಿಳಾ ಪಿಎಸ್ ಐ ಮತ್ತು ಕುಟುಂಬ
ಸವದತ್ತಿ ಬಳಿ ಸಂಭವಿಸಿದ್ದ ಕೆಎಸ್ ಆರ್ ಟಿಸಿ ಬಸ್-ಕಾರು ಅಪಘಾತ ಪ್ರಕರಣ
ಬೆಳಗಾವಿ: ಬೆಳಗಾವಿಯ ಸವದತ್ತಿ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ಮಹಿಳಾ ಪಿಎಸ್ ಐ ಲಕ್ಷ್ಮಿ ನಲವಡೆ ಸೇರಿದಂತೆ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಬಳಿ ಇಂದು ಸಂಜೆ ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಅಪಘಾತದ ರಭಸಕ್ಕೆ ಕಾರು ಬಸ್ಸಿನ ಅಡಿಗೆ ಸಿಲುಕಿಕೊಂಡಿತ್ತು.
ಕ್ರೇನ್ ಮೂಲಕ ಕಾರನ್ನು ಹೊರತೆಗೆಯಲಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿದ್ದವರು ಬೆಳಗಾವಿ ಸಹ್ಯಾದ್ರಿ ನಗರದ, ಮಹಿಳಾ ಪಿಎಸ್ ಐ ಲಕ್ಷ್ಮಿ ನಲವಡೆ ಹಾಗೂ ಕುಟುಂಬದವರಾದ ಪ್ರಸಾದ ಪವಾರ್, ಅಂಕಿತಾ ಪವಾರ್, ದೀಪಾ ಶಹಾಪುರಕರ್ ಎಂದು ತಿಳಿದುಬಂದಿದೆ.
ಕೆ ಎಸ್ ಆರ್ ಟಿಸಿ ಬಸ್ ಬೆಳಗಾವಿಯಿಂದ ಇಳಕಲ್ ಕಡೆಗೆ ಹೊರತಿದ್ದರೆ, ಕಾರು ಯರಗಟ್ಟಿಯಿಂದ ಬೆಳಗಾವಿಗೆ ಹೊರಟಿತ್ತು. ಚಚಡಿ ಕ್ರಾಸ್ ಬಳಿ ಬರುತ್ತಿದ್ದಂತೆ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವ ಮುರುಗೇಶ ನಿರಾಣಿ ಅದೇ ಮಾರ್ಗದಲ್ಲಿ ಹೋಗುವಾಗ ಅಪಘಾತ ನೋಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.